Wednesday, March 17, 2021

ವಿಶ್ವಧರ್ಮವಾಗುವಲ್ಲಿ ಹಿಂದೂ ಧರ್ಮಕ್ಕಿರುವ ಸಾಧ್ಯತೆಗಳು - ವಿವೇಕಾನಂದರ ಚಿಂತನೆ

ಪ್ರಸ್ತಾವನೆ:

    ಧರ್ಮ ಎಂದರೇನು ? ಇದೊಂದು  ಅತ್ಯಂತ ಸಂಕೀರ್ಣ ಪ್ರಶ್ನೆ. ಸುಲಭವಾಗಿ ಅರ್ಥೈಸಲು ಸಾಧ್ಯವಾಗದು. ಎಲ್ಲವನ್ನು ಧರಿಸುವಂತದ್ದು, ಎಲ್ಲದಕ್ಕೂ ಆಧಾರವಾಗಿರುವಂಥದ್ದನ್ನು ಧರ್ಮ ಎನ್ನಬಹುದು. ಇದೊಂದು ವಿಶ್ವವ್ಯಾಪಿ  ವ್ಯವಸ್ಥೆ, ಮೂಲಾಧಾರ. ಮಾನವ ವಿವೇಚನಾ ಶಕ್ತಿಯುಳ್ಳ  ಸಾಮಾಜಿಕ ಪ್ರಾಣಿ; ತಾನು ಶಾಂತಿ,  ನೆಮ್ಮದಿ, ಸುವ್ಯವಸ್ಥೆಯಿಂದ ಬಾಳ್ವೆ ನಡೆಸಲು  ಹಾಕಿಕೊಂಡ ತರ್ಕಬದ್ಧವಾದ ನೈತಿಕ ನೆಲೆಗಟ್ಟೇ ಧರ್ಮ ಎನ್ನಬಹುದು. 

ನಮ್ಮ ದೇಶ ಭಾರತದ ಪ್ರಧಾನವಾದ ಧರ್ಮ ಹಿಂದೂ ಧರ್ಮ. ಇದುವೇ ವಿಶ್ವದ ಅತ್ಯಂತ ಪುರಾತನವಾದ, ಸನಾತನವಾದ ಧರ್ಮ. ಇದು ಅನೇಕ ದೃಷ್ಟಿಕೋನಗಳ ವೈಶಿಷ್ಟ್ಯಕ್ಕೆ , ವಿವಿಧತೆಯಲ್ಲಿ  ಏಕತೆಗೆ ಸ್ಥಳ ಮಾಡಿಕೊಟ್ಟಿರುವ ಧರ್ಮ.  ಇಂತಹ ಹಿಂದೂ ಧರ್ಮದ ಹೆಮ್ಮೆಯ ಪ್ರತಿನಿಧಿ ವೀರಸನ್ಯಾಸಿ ವಿವೇಕಾನಂದರು.  ಭಾರತ ಕಂಡ ಈ ಯುವ ಪುರುಷ ಸಿಂಹ ಹಿಂದೂ ಧರ್ಮವನ್ನು ಪ್ರತಿನಿಧಿಸುತ್ತಾ ನಮ್ಮ ದೇಶಕ್ಕೆ ಹೆಮ್ಮೆ ತಂದ ಕೀರ್ತಿಪುರುಷ. ಅವರ ಆಲೋಚನೆಗಳು, ಚಿಂತನೆಗಳು, ಇಂದಿಗೂ ನಮ್ಮ ಯುವ ಜನಾಂಗಕ್ಕೆ ಆದರ್ಶಪ್ರಾಯವಾಗಿವೆ. ಯಾವುದೇ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಜನತೆಯ ಶಕ್ತಿಯೇ ಪ್ರಮುಖವಾದುದು ಎಂಬುದು ಸರ್ವರಿಗೂ ತಿಳಿದಿರುವ ವಿಚಾರ. "ಏಳಿ , ಎದ್ದೇಳಿ,  ಗುರಿ ಮುಟ್ಟುವವರೆಗೂ ನಿಲ್ಲದಿರಿ!!" ಎಂಬ ಅವರ ವಿದ್ಯುತ್ ವಾಣಿಯಿಂದಲೇ ನಮ್ಮಂತಹ ಅನೇಕ ಯುವಕರು, ವಿದ್ಯಾರ್ಥಿಗಳು ಸ್ಫೂರ್ತಿ ಪಡೆದಿದ್ದೇವೆ. ಆದ್ದರಿಂದಲೇ ಅವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಿ, ಅವರ ಚಿಂತನೆಗಳನ್ನು, ವಿಚಾರಧಾರೆಗಳನ್ನು ಸ್ಮರಿಸಿ ಗೌರವಿಸುತ್ತೇವೆ. ಅಷ್ಟೇ ಆದರೆ  ಸಾಕೇ ?  ಅವರ ಆಲೋಚನೆಗಳನ್ನು, ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮ ಯುವ ಜನಾಂಗಕ್ಕೆ ಇದೆಯಲ್ಲವೇ? ಆಗಷ್ಟೇ ತಾನೇ, ಗುರಿಸಾಧನೆಯಾಗುವುದು… ?!!

ಈಗ ನಮ್ಮ ಸನಾತನ  ಹಿಂದೂ ಧರ್ಮ  ವಿಶ್ವಧರ್ಮವಾಗುವಲ್ಲಿ,ವಿವೇಕಾನಂದರ ಚಿಂತನೆಗಳು  ಏನೇನಿತ್ತು ...?
ತಿಳಿಯೋಣ ಬನ್ನಿ… 






 ವಿಷಯ ಮಂಡನೆ :

    ೧೮೯೩ರ ಸೆಪ್ಟೆಂಬರ್ ೧೧ ರಿಂದ ೨೭ನೆೇ ತಾರೀಖಿನ ವರೆಗೆ ಅಮೆರಿಕೆಯ ಷಿಕಾಗೊ ನಗರದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ನಮ್ಮ ಸ್ವಾಮೀ ವಿವೇಕಾನಂದರು,  ದೇಶದಿಂದ, ಹಿಂದೂ ಧರ್ಮದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. ಇದು ವಿಶ್ವದ ಪ್ರಥಮ ಧರ್ಮ  ಸಮ್ಮೇಳನವಾಗಿದ್ದು, ಜಗತ್ತಿನಾದ್ಯಂತ ಪ್ರತಿನಿಧಿಗಳು, ಇಲ್ಲಿ ಭಾಗವಹಿಸಿದ್ದರು. 

    ೧೧ನೆೇ ಸೆಪ್ಟೆಂಬರ್ , ಸ್ವಾಮಿ ವಿವೇಕಾನಂದರು,  ತಮ್ಮ ಪ್ರಥಮ ಉಪನ್ಯಾಸವನ್ನು ಪ್ರಸ್ತುತ ಪಡಿಸಿದರು. ಅಲ್ಲಿ ಮೊದಲನೆಯದಾಗಿ ಅವರು ನೆರೆದಿದ್ದ ಜನಸ್ತೋಮವನ್ನು ಸಂಬೋಧಿಸಿದ್ದು, "Sisters and Brothers of America " ಎಂದು. ಈ ರೀತಿಯಾದ ಸಂಬೋಧನೆಯನ್ನು ಕೇಳಿ ರೋಮಾಂಚಿತರಾದ ಸಭಾ ಸದಸ್ಯರು, ಎದ್ದು ನಿಂತು ೨ ನಿಮಿಷಗಳ  ಕಿವಿಗಡಚಿಕ್ಕುವ ಕರತಾಡನ ಮಾಡಿ ಸ್ವಾಗತಿಸಿದರು. ಇಲ್ಲಿದೆ ನೋಡಿ ಹಿಂದೂ ಧರ್ಮದ ತಾಕತ್ತು!!  ಅಂದಿನ ಪ್ರಾಸ್ತಾವಿಕ ಭಾಷಣದಲ್ಲಿಯೇ, ಹಿಂದೂ ಧರ್ಮದ ಬಗೆಗಿನ ಸಕಲವನ್ನೂ ಎರಡೇ ಸಾಲಿನಲ್ಲಿ ಹೇಳಿ ಮುಗಿಸಿದ್ದರು.ಜನ ಮಾನಸವನ್ನು ಸೂರೆಗೊಂಡಿದ್ದರು.  "ಜಗತ್ತಿಗೆ  ಸಹನೆ, ಸಹಿಷ್ಣುತೆಯನ್ನು, ಸಾರ್ವಕಾಲಿಕ ಸ್ವೀಕೃತಿಯನ್ನೂ ಪ್ರಚುರಪಡಿಸಿರುವ ಹಿಂದೂ ಧರ್ಮದ ಪ್ರತಿನಿಧಿಯಾಗಿ, ಭಾರತದಿಂದ ಬಂದಿರುವ  ನಾನು ನಿಮ್ಮೆಲ್ಲರಿಗೂ ಅಭಿವಂದಿಸುತ್ತೇನೆ" ಎಂದಿದ್ದರು ವಿವೇಕಾನಂದರು. 

ಈ ಎರಡು ಸಾಲುಗಳೇ   ಸಾಕು, ಹಿಂದೂ ಧರ್ಮದ ಸಾರ್ವಭೌಮತೆಯನ್ನು ಸಾರಲು. ಮನುಸ್ಮೃತಿಯಲ್ಲಿ  ಹೇಳಿರುವಂತೆ,

धृति: क्षमा दमोऽस्‍तेयं शौचमिन्‍द्रियनिग्रह:।
धीर्विद्या सत्‍यमक्रोधो दशकं धर्मलक्षणम्‌।। "   (मनुस्‍मृति ६.९२)

ಧರ್ಮದ ೧೦ ಗುಣವಿಶೇಷಗಳು ಇಂತಿವೆ: 

 ಧೈರ್ಯ, ಕ್ಷಮೆ, ಆತ್ಮಸಂಯಮ, ಕಳ್ಳತನ ಮಾಡದಿರುವಿಕೆ,  ಆಂತರ್ಯದ ಪಾವಿತ್ರ್ಯತೆ, ಇಂದ್ರಿಯ ನಿಗ್ರಹ, ಪ್ರಜ್ಞೆ, ಜ್ಞಾನ, ಸತ್ಯ ಹಾಗು ಶಾಂತಿ. 

ವಿವೇಕಾನಂದರು ಹೇಳಿದಂತೆ, ಇಂತಹ ಗುಣವಿಶೇಷಗಳುಳ್ಳ ಹಿಂದೂ ಧರ್ಮವೇ ಜಗತ್ತಿಗೆ ತಾಳ್ಮೆ ಹಾಗೂ ಸ್ವೀಕಾರವನ್ನು ಕಲಿಸಿರುವುದು. 

೧೫ ಸೆಪ್ಟೆಂಬರ್ ನಂದು ವಿವೇಕಾನಂದರು, ತಮ್ಮ ಭಾಷಣದಲ್ಲಿ "ಕೂಪಮಂಡೂಕ"ದ  ಕಥೆಯ ನಿರೂಪಣೆ ಮಾಡುತ್ತಾರೆ. ಇದು ಜನಾನಾರಭ್ಯದಿಂದ, ಬಾವಿಯೊಳಗಡೆಯೇ ಇದ್ದು, ಬೇರೆ ಯಾವ ಬಾಹ್ಯ ಸಂಪರ್ಕವೂ, ಪ್ರಾಪಂಚಿಕ ಜ್ಞಾನವೂ ಇರದ, ತನ್ನ ಬಾವಿಯೇ ಶ್ರೇಷ್ಠ ಎಂದು ಬಾವಿಯೊಳಗಿನ ಮೂರ್ಖ ಕಪ್ಪೆಯ ಕತೆ. ಸಹಿಷ್ಣುತೆ, ಸ್ವೀಕಾರ ಮನೋಭಾವಗಳಿಲ್ಲದಿದ್ದರೆ, ಯಾವ ಧರ್ಮೀಯನಾದರೂ, ಬಾವಿಯೊಳಗಿನ ಕಪ್ಪೆಯಂತಾಗುತ್ತಾನೆ. 

೧೯ನೆೇ  ಸೆಪ್ಟೆಂಬರ್ , ತಮ್ಮ ಮೂರನೆಯ ಭಾಷಣದಲ್ಲಿ ವಿವೇಕಾನಂದರು, ಹಿಂದೂ ಧರ್ಮದ ಬಗೆಗಿನ ತಮ್ಮ  ಪ್ರಸ್ತುತ  ಪಡಿಸುತ್ತಾರೆ.  ಇಲ್ಲಿ ಅವರು, ವೇದಾಂತದ ಬಗೆಗೆ ಪ್ರಸ್ತಾಪಿಸುತ್ತಾ, ಹಿಂದೂ ಧರ್ಮವು, ವೈಜ್ಞಾನಿಕ ತಳಹದಿಯಲ್ಲಿಯೇ ವಿಕಾಸನಗೊಂಡು, ತನ್ನ ಬೆಳಕನ್ನು ಹೊರಚೆಲ್ಲುವ ಏಕೈಕ ಧರ್ಮವಾಗಿದೆ ಎಂದು ಹೇಳುತ್ತಾರೆ. ವಿಜ್ಞಾನದ ಮೂಲ ಉದ್ದೇಶ, ಏಕತನವವನ್ನು ಅನ್ವೇಷಿಸುವುದು. ಹಿಂದೂ ಧರ್ಮದ ವೇದಾಂತ ತತ್ವವೂ ಸಹ, ಎಂದಿಗೂ ಬದಲಾಗದ ಅಚಲ ಸತ್ಯದ ದರ್ಶನ, ಅಥವಾ ಆತ್ಮ ಸಾಕ್ಷಾತ್ಕಾರವನ್ನೇ ಪ್ರತಿಪಾದಿಸುತ್ತದೆ. 

ವಿವೇಕರ ಇದೇ  ಅಭಿಪ್ರಾಯದ ಆಧಾರದ ಮೇಲೆ, ನಾವು ಎಲ್ಲ ಧರ್ಮದವರೂ ಒಪ್ಪಬಹುದಾದ ತಾತ್ವಿಕ ನಿಲುವು ಹೊಂದಿರುವ ಹಿಂದೂ ಧರ್ಮವು ವಿಶ್ವಧರ್ಮವಾಗುವ ಎಲ್ಲ ಅರ್ಹತೆಗಳೂ ಹೊಂದಿದೆ ಎಂದು ಪ್ರತಿಪಾದಿಸಬಹುದಾಗಿದೆ. ಹಿಂದೂ ಧರ್ಮದಲ್ಲಿ, ಪ್ರತಿ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಯೋಗ್ಯತಾನುಸಾರವಾಗಿ ಆತ್ಮೋದ್ಧಾರದ ಮಾರ್ಗಗಳನ್ನು ತಿಳಿಯಪಡಿಸಿದೆ. ಅದು ಕರ್ಮಮಾರ್ಗವಾಗಿರಬಹುದು, ಭಕ್ತಿಮಾರ್ಗವಾಗಿರಬಹುದು, ಜ್ಞಾನಮಾರ್ಗವಾಗಿರಬಹುದು, ಅಥವಾ ಯೋಗಮಾರ್ಗವಾಗಿರಬಹುದು (ರಾಜಯೋಗ). ಹಿಂದೂ ಧರ್ಮದಲ್ಲಿರುವ ಈ ನಮ್ಯತೆ ಬೇರೆ ಯಾವ ಧರ್ಮದಲ್ಲಿಯೂ  ನಮಗೆ ಕಾಣಸಿಗುವುದಿಲ್ಲ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಬೋಧಿಸಿರುವುದೂ ಇದನ್ನೇ... 

ತಮ್ಮ ಮುಂದಿನ ಭಾಷಣದಲ್ಲಿ, ಅಂದರೆ, ೨೦ ಸೆಪ್ಟೆಂಬರ್ ನಂದು, ವಿವೇಕರು, ಕ್ರೈಸ್ತ ಮಿಷನರಿಗಳನ್ನು ಖಂಡಿಸಿ ಅವರ ನೆಲದಲ್ಲಿಯೇ ತಿಳಿ ಹೇಳುತ್ತಾರೆ.. ! "ಓ ಪಾಪಿಗಳೆ  ನಿಮ್ಮನ್ನು ನಾವು ಉಳಿಸುತ್ತೇವೆ , ನಮ್ಮ ಧರ್ಮವನ್ನು ಒಪ್ಪಿಕೊಳ್ಳಿ … " ಎಂದು ಪ್ರತಿಪಾದನೆ ಮಾಡುವುದು ಎಷ್ಟು  ಸರಿ ಎಂದು ಪ್ರಶ್ನಿಸುತ್ತಾರೆ. ಅಲ್ಲದೇ ಹಸಿದವನಿಗೆ ಅನ್ನ ನೀಡುವುದು ಧರ್ಮವೇ ಹೊರತು, ಇಂತಹ ಬಲವಂತದ ಹೇರಿಕೆಗಳಲ್ಲ ಎಂದು ತಮ್ಮ ವಾದ ಮಂಡಿಸುತ್ತಾರೆ. ಇದು ಸಾರ್ವಕಾಲಿಕ ಸತ್ಯವಲ್ಲವೇ …? ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಪ್ರತಿ ತಾಯಿಯೂ  ಸಣ್ಣ ಮಗುವಿನಿಂದಲೂ ಕಲಿಸುವ ಪಾಠ ಇದೇ ಅಲ್ಲವೇ … !
          ದಯೆಯೇ ಧರ್ಮದ ಮೂಲ ಎಂದು.  

೨೬ ನೇಯ ಸೆಪ್ಟೆಂಬರ್ ನಂದು, ಸ್ವಾಮಿ, ಬೌದ್ಧ ಧರ್ಮದ ಕುರಿತು ಪ್ರಸ್ತಾಪಿಸಿದರು. ವಿವೇಕರು ಹೇಳಿದ ಒಂದೇ ಮಾತು ಸಭೆಯನ್ನು ತೀವ್ರ ಆಲೋಚನೆಗೆ ಒಳಪಡುವಂತೆ ಮಾಡಿತ್ತು. ಕ್ರೈಸ್ತ ಧರ್ಮದ ಮೂಲ ಪುರುಷನಾದ ಜೀಸಸ್ ಒಬ್ಬ ಯಹೂದಿ. ಶಾಕ್ಯಮುನಿ ಯಾದ ಗೌತಮ ಬುದ್ಧ ಒಬ್ಬ ಹಿಂದೂ. ಯಹೂದಿಗಳು, ಜೀಸಸ್ಸ್ ನ ಅಭಿಪ್ರಾಯಗಳಿಗೆ, ಬೋಧನೆಗಳಿಗೆ ಮಾನ್ಯತೆ ಕೊಡದೆ, ಅತ್ಯಂತ ಕ್ರೂರವಾಗಿ  ಕಂಡು, ಆತನನ್ನು ಶಿಲುಬೆಗೇರಿಸಿದರು. ಹಿಂದೂಗಳು, ಬುದ್ಧನನ್ನು ಒಪ್ಪಿಕೊಂಡು, ಅವನ ಆಧ್ಯಾತ್ಮಿಕ ಸಾರ್ವಭೌಮತೆಯನ್ನು ಕೊಂಡಾಡಿದರು. ಆದ್ದರಿಂದ, ಬೌದ್ಧಧರ್ಮ ಹಿಂದೂ ಧರ್ಮದ ಒಂದು ಈಡೇರಿದ ಆಕಾಂಕ್ಷೆಯಂತೆ.!!!

೨೭ ಸೆಪ್ಟೆಂಬರ್ ನಂದು, ತಮ್ಮ ಕೊನೆಯ ಉಪನ್ಯಾಸದಲ್ಲಿ, ಸಮ್ಮೇಳನದ ಯಶಸ್ಸಿಗೆ ಕಾರಣರಾದ ಸರ್ವರಿಗೂ  ವಂದಿಸಿ, ಸಹಕಾರ, ಶಾಂತಿ, ನೆಮ್ಮದಿಗಳಿಂದ ಭಿನ್ನಾಭಿಪ್ರಾಯಗಳನ್ನು  ದೂರ ಮಾಡಿಕೊಂಡು,  ಸಾಮರಸ್ಯದಿಂದ ಬಾಳ್ವೆ ನಡೆಸಬೇಕೆಂದು  ಉಪಸಂಹರಿಸಿದರು. 

ಇವಿಷ್ಟು ಸ್ವಾಮಿ ವಿವೇಕಾನಂದರ ಷಿಕಾಗೋ ಸಮ್ಮೇಳನದಲ್ಲಿ ಹಿಂದೂ ಧರ್ಮದ ಸಾರ್ವಭೌಮತೆಯನ್ನು ಕುರಿತಾಗಿ, ಹಿಂದೂ ಧರ್ಮದ ಪ್ರತಿನಿಧಿಯಾಗಿ ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸಿದ್ದರ  ತಿರುಳು. 

೨೫ ಮಾರ್ಚ್ ೧೮೯೬ರಲ್ಲಿ ವಿವೇಕಾನಂದರು, ಹಾವರ್ಡ್ ಯೂನಿವರ್ಸಿಟಿಯಲ್ಲಿ ವೇದಾಂತ ತತ್ವದ ಬಗ್ಗೆ ಉಪನ್ಯಾಸ ನೀಡಿ,  ಸಭಿಕರ ಜೊತೆ ಪ್ರಶ್ನೋತ್ತರ ಮಾಲಿಕೆಯಲ್ಲಿ ಭಾಗವಹಿಸಿ ಅವರ ಸಂದೇಹಗಳನ್ನು ಪರಿಹರಿಸಿದರು.  
ಆತ್ಮೋದ್ಧಾರದ ಮಾರ್ಗಗಳ ಬಗ್ಗೆ, ಹಾಗೂ ಅದ್ವೈತ, ದ್ವೈತಗಳ  ಬಗೆಗೆ ವಿವರಣೆ ನೀಡಿದ್ದರು. ಹಿಂದೂ ಧರ್ಮದಲ್ಲಿರುವ ನಮ್ಯತೆ ಹಾಗೂ ಸ್ವತಂತ್ರದ  ಬಗೆಗೆ ಸಭಿಕರಿಗೆ ಮನದಟ್ಟು ಮಾಡಿದ್ದರು. ಜಗತ್ತಿನ ಮಾತೃ ಧರ್ಮ ಹಿಂದೂ ಧರ್ಮವೇ ಆಗಿದ್ದು, ಈಗಿರುವ ಎಲ್ಲ ಧರ್ಮಗಳಿಗೂ ಅದರ ಪ್ರಭಾವ ಇದ್ದೇ ಇದೆ ಎನ್ನುವುದನ್ನು ಅರಿಯುವಂತೆ ಮಾಡಿದರು. 
ಹಿಂದೂ ವಿಶ್ವಧರ್ಮವಾಗುವ ಎಲ್ಲ ಸಾಧ್ಯತೆಗಳನ್ನು ಹೊಂದಿರುವುದನ್ನು ನಾವು ಇಲ್ಲಿ ಗಮನಿಸಬಹುದು. 

ಭಗವದ್ಗೀತೆಯ ಸಾರವನ್ನು ವಿವೇಕರು ಎಲ್ಲರಿಗೂ ಬೋಧಿಸುತ್ತಿದ್ದರು. ಹಿಂದೂ ಧರ್ಮದ ಎಲ್ಲಾ ಮೂಲಮಂತ್ರವೂ ಸಹ ಗೀತೆಯಲ್ಲಿಯೇ ಅಡಕವಾಗಿದೆ. 

ಉಪಸಂಹಾರ:
ಹೀಗಿರುವಾಗ ವಿಶ್ವಧರ್ಮವಾಗುವ ಎಲ್ಲಾ ಮಾನ್ಯತೆ, ಅರ್ಹತೆಗಳೂ ಹಿಂದೂ ಧರ್ಮದಲ್ಲಿ ಸಾರ ರೂಪದಲ್ಲಿದ್ದು, ವಿವೇಕಾನಂದರ ಚಿಂತನೆಗಳು ಇದನ್ನೇ ಪ್ರತಿಪಾದಿಸುತ್ತವೆ. 

Wednesday, January 6, 2021

ಕಣ್ಣಾಮುಚ್ಚಾಲೆ - ಸಸ್ಪೆನ್ಸ್ ಥ್ರಿಲ್ಲರ್ (Small Story)

 ಡಿಟೆಕ್ಟಿವ್ ಅಮರ್, ಹೊಟೇಲ್‌ ರೂಮ್‌ನ ಕಿಟಕಿಯಿಂದ, ಎದುರಿಗಿರುವ ಮರದ ಎಲೆಗಳಿಂದ ಮಳೆಹನಿಗಳು ತೊಟ್ಟಿಕ್ಕುವುದನ್ನು ನೋಡುತ್ತಾ ನಿಂತಿದ್ದ. ಆ ನೀರವ ಮೌನದಲ್ಲಿ ಹನಿಗಳು ಭೂಮಿಯನ್ನು ಅಪ್ಪಳಿಸುವ ಶಬ್ದಗಳು ಸ್ಪಷ್ಟವಾಗಿ ಕೇಳುತ್ತಿದ್ದವು. ಅವನ ಆಲೋಚನಾ ಲಹರಿಯಲ್ಲಿ ಅದೊಂದೇ ಚಿಂತೆ….. “3 ದಿನದ ಹಿಂದೆ ನಡೆದ ಪ್ರಖ್ಯಾತ ನಾಯಕ ನಟಿ ಅಂಜನಾಳ ಸಾವು ಹೇಗೆ ಸಂಭವಿಸಿರಬಹುದು ಎಂದು...”

ರೂಮಿನ ಕಾಲಿಂಗ್ ಬೆಲ್ ಸದ್ದು ಅಲ್ಲಿನ ನೀರವತೆಯನ್ನು ಮರೆಸಿ, ಅಮರ್‌ನನ್ನು ವಾಸ್ತವಕ್ಕೆ ಕರೆ ತಂದಿತು. ಬಾಗಿಲು ತೆಗೆಯುತ್ತಿದ್ದಂತೆ ಒದ್ದೆ ಛತ್ರಿ ಕೊಡವುತ್ತಾ ಒಳಬಂದದ್ದು ಅವನ ಸಹಾಯಕ ಅಜಿತ್. 

“ತಗೋ ಬಿಸಿಬಿಸಿ ಪಕೋಡಾ……  ಕೆಳಗಿನ ಗಾಡಿ ಅಂಗಡಿಯದು..  ರೂಂ ಸರ್ವೀಸ್‌ಗೆ 2 ಖಡಕ್ ಟೀ ತರಲು ಹೇಳಿದ್ದೇನೆ… “ ಎಂದನು ಅಜಿತ್. 

“2 ದಿನಗಳಿಂದ ಬರೀ ಪಕೋಡಾ ತಿಂದು ಟೀ ಕುಡಿದದ್ದೇ ಬಂತು… .. ನಾನು ಹೇಳಿದ ಕೆಲಸ ಆಯಿತಾ…. “ ರೇಗಿದ ಅಮರ್. 

ಸಕಲೇಶಪುರದ ಛಳಿಗಾಳಿ ಮಳೆಗೆ ಪಕೋಡಾ, ಟೀ ಇಲ್ಲದೇ ಹೋದರೆ ನಾವು ಫ್ರೀಜ್ ಆಗುತ್ತಿದ್ವಿ…  ನಿನ್ನ ಕೆಲಸ ಆಗಿದೆ… ಪೋಸ್ಟ್ ಮಾರ್ಟಮ್ ರಿಪೋರ್ಟ್ ತಂದಿದ್ದೇನೆ ತಗೋ …” ಎಂದು ಕೈಲಿದ್ದ ವರದಿಯನ್ನು ಅಮರ್ ಕೈಗಿತ್ತನು ಅಜಿತ್. 

ನಡೆದದ್ದಿಷ್ಟು….

"ಸಕಲೇಶಪುರದಲ್ಲಿ"ಕಣ್ಣಾಮುಚ್ಚಾಲೆ " ಚಿತ್ರದ ಶೂಟಿಂಗ್ ಗೆ ತಂಡದೊಂದಿಗೆ ಬಂದಿದ್ದರು ಪ್ರಖ್ಯಾತ ಯುವ ನಿರ್ದೇಶಕ ಸುಕುಮಾರ್ . ನಾಯಕ ರಂಜಿತ್, ನಾಯಕಿ ಅಂಜನಾ. ಇವರ ಕಾಂಬಿನೇಷನ್  ಹಿಂದಿನ ಚಿತ್ರ "ಮಳೆಹನಿ" ಸೂಪರ್ ಹಿಟ್ ಆಗಿತ್ತು. ಅಂಜನಾಳ ತಾಯಿ, ಪ್ರಸಿದ್ಧ ಡಾಕ್ಟರ್, ಈ.ಏನ್.ಟಿ ತಜ್ಞೆ  ಡಾ.ವಂದನಾ ರಾವ್ ಅವರೇ ಎರಡೂ ಚಿತ್ರಗಳ ನಿರ್ಮಾಪಕಿ.  ಶೂಟಿಂಗ್ ಹಂತದಲ್ಲಿದ್ದ "ಕಣ್ಣಾಮುಚ್ಚಾಲೆ" ಚಿತ್ರದ ಮೇಲೆ ಭಾರೀ ನಿರೀಕ್ಷೆಯಿತ್ತು. ಚಿತ್ರೀಕರಣವೆಲ್ಲಾ ಸಂಪೂರ್ಣಗೊಂಡು, ಬಾಕಿಯಿದ್ದ ಹಾಡೊಂದನ್ನು ಶೂಟ್ ಮಾಡಲು, ಸಕಲೇಶಪುರ ಲೊಕೇಶನ್ ಗೆ ಬಂದಿತ್ತು ಚಿತ್ರತಂಡ. ೨ ದಿನ ಶೂಟಿಂಗ್ ಮುಗಿದ ನಂತರ, ಅಂದು ರಾತ್ರಿ, ನಾಯಕಿ ಅಂಜನಾ ನಿಗೂಢವಾಗಿ ಹೆಣವಾಗಿದ್ದಳು. ಅವಳು ಉಳಿದುಕೊಂಡಿದ್ದ ಪ್ರಶಾಂತ್ ಹೊಟೇಲಿನ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಬಿಟ್ಟ ಕಣ್ಣು ಬಿಟ್ಟಂತೆ  ಆಕಾಶದೆಡೆಗೆ ನೇರ ದೃಷ್ಟಿಇತ್ತು, ದೇಹದ ಮೇಲೆ ಯಾವುದೇ ಗಾಯವಾದ ಕಲೆಯಿಲ್ಲ, ರೂಮಿಗೆ ಯಾರೂ ಬಂದು ಹೋದ ಸುಳಿವಿಲ್ಲ.. ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದಳು ಅಂಜನಾ... "

ಪೊಲೀಸ್ ಇಲಾಖೆ, ಖ್ಯಾತ ಡಿಟೆಕ್ಟಿವ್ ಅಮರ್ ನಾಥ್ ಸಹಾಯ ಕೋರಿದ್ದರು. ಮರಣೋತ್ತರ ಪರೀಕ್ಷೆಯಲ್ಲೂ ಏನೂ ಸುಳಿವು ಸಿಕ್ಕುವಂತಹ ಮಾಹಿತಿಯಿಲ್ಲ. ಸಾವಿನ ಕಾರಣ 'ಆಸಫಿಕ್ಸಿಯಾ' ಎಂದಷ್ಟೇ ಬರೆದಿದ್ದಾರೆ. ಉಳಿದೆಲ್ಲವೂ ನಾರ್ಮಲ್ ಎಂದೇ ಹೇಳುತ್ತೆ.  ಅಂದರೆ ಉಸಿರಾಟ ನಿಂತದ್ದರಿಂದ ಸಾವಾಗಿದೆ. ಉಸಿರಾಟವನ್ನು ಬಲವಂತವಾಗಿ ನಿಲ್ಲಿಸಿರುವಂತಹ ಯಾವ ಕುರುಹೂ ಇಲ್ಲ. ಎಲ್ಲವೂ ಗೋಜಲಾಗಿ ಕಂಡಿತು ಅಮರ್ ಗೆ.  ಅವರದೇ ಸ್ವಂತ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ. ತಾಯಿಯೂ ಜೊತೆಗಿದ್ದರು, ಹೀಗೆ ರಾತ್ರಿ ಮಲಗಿದ್ದ ಮಗಳು, ಈ ರೀತಿಯಾಗಿ ಶವವಾಗಿದ್ದಾಳೆ ಎಂದರೆ ಏನರ್ಥ.. ?

"ನಿನಗೇನಾದರೂ ಕ್ಲೂ ಸಿಕ್ತಾ ..?" ಅಜಿತ್ ನನ್ನ ಕೇಳಿದ ಅಮರ್. 




"ಏನು ಮಣ್ಣಂಗಟ್ಟಿಯೂ ಸಿಕ್ಕಿಲ್ಲ ...  ಈ ಭಾರೀ ಮಳೆಯಲ್ಲಿ, ಯಾವ ಪಬ್ಲಿಕ್ ಟ್ರಾನ್ಸ್ಪೋರ್ಟೂ ಇಲ್ಲದ ಊರಲ್ಲಿ, ನೀನು ಅರೆಂಜ್ ಮಾಡಿದ್ದ ಡಬ್ಬಾ ಬೈಕಿನಲ್ಲಿ ೪ ಮೈಲಿ ದೂರದ  ಆ ಸರ್ಕಾರಿ ಆಸ್ಪತ್ರೆಗೆ ಹೇಗಪ್ಪಾ ಹೋಗೋದೂ ಅಂತ ಒದ್ದಾಡುತ್ತಿದ್ದೆ ... ಆಗ ಆ ಹೀರೊಯಿನ್ ತಾಯಿ ಪುಣ್ಯಾತಗಿತ್ತಿ ಡಾಕ್ಟರ್ ಅಮ್ಮನ ಕಾರ್ ಅಲ್ಲಿ ಡ್ರಾಪ್ ಸಿಕ್ತು ಅಷ್ಟೇ !!. 

ನೀನೇನೆೇ  ಹೇಳು ಅಮರ್, ಹೀರೊಯಿನ್ ಗಿಂತ ಆಅವರಮ್ಮನೇ ಸಖತ್ತಾಗಿದ್ದಾರೆ..  ಏನ್ ಸ್ಟೈಲು, ಏನ್ ಕಥೆ.. ವಯಸ್ಸಿದ್ದಿದ್ರೆ ಆ ಯಮ್ಮನ್ನೇ  ನಾಯಕಿ ಮಾಡ್ತಿದ್ರೇನೋ ಆ ನಿರ್ದೇಶಕ ಸುಕುಮಾರ್. ... " ತನ್ನ  ತಿಳಿಸಿದ ಅಜಿತ್. 

"ಕಾರ್ ನಲ್ಲಿಅವರು ಎಲ್ಲಿಗೆ ಹೊರಟಿದ್ದರು ? ಜೊತೆಗೆ ಯಾರಾದ್ರೂ ಇದ್ರಾ ...?" ಕೇಳಿದ ಅಮರ್. 

"ಡೈರೆಕ್ಟರ್ ಸಾಹೇಬ್ರು ಇದ್ರು.. ಈ  ರೀತಿ ಅನಾಹುತ ಆಯ್ತಲ್ಲ.. ಮುಂದೆ ಸಿನೆಮಾ ರಿಲೀಸ್ ಹೇಗ್ ಮಾಡೋದು ಅಂತ ಡಿಸ್ಕಸ್ ಮಾಡೋಕೆ ಅಲ್ಲಿಯೇ ಆಸ್ಪತ್ರೆ ಹತ್ತಿರವಿರುವ ಐ .ಬಿ ಗೆ ಹೋದ್ರು...  " ವಿಷಯ ತಿಳಿಸಿದ ಅಜಿತ್. 

"ಸಿಕ್ತು ಭಾರೀ ಕ್ಲೂ ... " ಕಿರುಚಿದ ಅಮರ್. 

"ಏನ್ ಅಂಥಾದ್ದು ...? " ಕೇಳಿದ ಅಜಿತ್. 

"ನಡಿ. .. ನನ್ನ ಗೆಸ್ಸ್ ಕರ್ರೆಕ್ಟ್ ಆಗಿದ್ರೆ ಅಲ್ಲೇ ಸಿನೆಮಾನೆೇ  ತೋರಿಸ್ತೀನಿ .. "  ಅರ್ಜೆಂಟ್ ಆಗಿ ಈಗ ನಾವು ಐ .ಬಿ ಕಡೆಗೆ ಹೋಗ್ಬೇಕು.. ಎಂದು, ಹೊಟೇಲ್ ಮ್ಯಾನೇಜರ್ ನಲ್ಲಿ ಮನವಿ ಮಾಡಿಕೊಂಡು, ಅವರ ಕಾರಿನಲ್ಲೇ ಇಬ್ಬರೂ ಹೊರಟರು. 

ಅಲ್ಲಿ ಬಂದು ಸದ್ದಿಲ್ಲದೇ ವಂದನಾ, ಸುಕುಮಾರ್ ಇಬ್ಬರೂ ಇದ್ದ ರೂಮಿನ ಕಿಟಕಿಯಲ್ಲಿ ಇಣುಕಿ ನೋಡಿದರು. ತೀರಾ ನಿಕಟವಾದ  ಪ್ರೇಮಿಗಳಂತೆ  ಜೊತೆಗಿದ್ದ ಅವರನ್ನು ನೋಡಿದ ಅಜಿತ್ ಗೆ ದಂಗು ಬಡಿದಂತಾಗಿತ್ತು. 

"ಎಲಾ ಇವರಾ.. ಈ ವಮ್ಮನ ವಯಸ್ಸೇನು .. ಆ ಹುಡುಗನ ಜೊತೆ ಚಕ್ಕಂದ ಆಡ್ತಿದ್ದಾಳಲ್ಲಾ ... " ಆಶ್ಚರ್ಯ ವ್ಯಕ್ತಪಡಿಸಿದ ಅಜಿತ್. 

"ಎಲ್ಲಿ ವಿಡಿಯೋ ರೆಕಾರ್ಡ್ ಮಾಡು, ಹೇಗೆ ಪ್ರಾಣ ಹೋಗಿದೆ ಅಂತ ಆ ಯಮ್ಮನೇ ಹೇಳ್ತಾಳೆ.. ಇದನ್ನೇ ನಾವು "ಕಣ್ಣಾಮುಚ್ಚಾಲೆ" ಸಿನಿಮಾ ಅಂತ ರಿಲೀಸ್ ಮಾಡೋಣ.. 

ರೆಕಾರ್ಡ್ ಮೋಡ್ ಆನ್... 

ಸುಕುಮಾರ್: ನನಗೋಸ್ಕರ ಎಷ್ಟೊಂದು ರಿಸ್ಕ್ ತಗೊಂಡೆ ಡಾರ್ಲಿಂಗ್.... ನಿನಗಿದೆಲ್ಲ ಹೇಗೆ ಸಾಧ್ಯ ಆಗುತ್ತೆ.. 

ವಂದನಾ: "ಥ್ರಿಲ್ ಗಾಗಿ ಡಾರ್ಲಿಂಗ್ ... ನನ್ನ ಜೀವನದಲ್ಲಿ ನಿನ್ನ ಪರಿಚಯವಾಗಿದ್ದೇ ಒಂದು ಥ್ರಿಲ್.. ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳ್ಕೊಂಡು, ವಿರಹ ವೇದನೆ ಅನುಭವಿಸ್ತಿದ್ದ ನನಗೆ ಈಗ ನೀನು ಸಿಕ್ಕಿರುವುದೇ  ನನ್ನ ಜೀವನದ ರೋಮಾಂಚಕ ಘಟ್ಟ. ಈ ಹಂತದಲ್ಲಿ ನಮ್ಮಿಬ್ಬರ ಮಧ್ಯೆ ಯಾರೇ ಬಂದ್ರೂ, ನಾನು ಅವರನ್ನು ಸಹಿಸಲ್ಲ..  ಕೊನೆಗೆ ಅವಳು ನನ್ನ ಮಗಳಾದರೂ ಸರಿ. 

ಸುಕುಮಾರ್: ಅದು ಸರಿ.. ಆ ಡಿಟೆಕ್ಟಿವ್ ಅಸಿಸ್ಟೆಂಟ್ ಗೆ ಫೋರೆನ್ಸಿಕ್ ಲ್ಯಾಬ್ ಕಡೆ ಡ್ರಾಪ್ ಕೊಟ್ಟೆಯಲ್ಲ...  ಪೋಸ್ಟ್ ಮಾರ್ಟಮ್ ರಿಪೋರ್ಟ್ ನಲ್ಲಿ ಕೊಲೆ ಅಂತ ಗೊತ್ತಾಗಲ್ವಾ.. 

ವಂದನಾ: ನಾನ್ಯಾರೋ ಫೂಲ್ ಅಂತ ತಿಳ್ಕೊಂಡ್ಯಾ ಸುಕ್ಕು...  ನಾನೊಬ್ಬ  ಡಾಕ್ಟರ್.. ಅದರಲ್ಲೂ    E.N. T ಸ್ಪೆಷಲಿಸ್ಟ್ . ನಾನು ಅಂಜನಾಳ ಮೂಗು ಬಾಯಿಗೆ ಬಟ್ಟೆ ಹಾಕಿ, ಒದ್ದೆ ಮಾಡಿ, ನಂತರ ಉಸಿರು ನಿಲ್ಲಿಸಿದ್ದೇನೆ. ಆಗ ಕುತ್ತಿಗೆ ಮುರಿಯುವುದಾಗಲೀ, ಇತರ ಗುರುತುಗಳಾಗಲೀ ಯಾವುದೂ ಆಗೋಲ್ಲ. ಉಸಿರಾಡೋಕ್ಕೆ ಆಕ್ಸಿಜನ್ ಸರಿಯಾಗಿ ಸಿಗದೇ ಸಾವಾಗುತ್ತೆ ಅಷ್ಟೇ ... "

ಸುಕುಮಾರ್: "ಯೂ ಆರ್ ಗ್ರೇಟ್... !  ಐ ಲವ್ ಯೂ ವೆರಿ ಮಚ್ ... "

ಇದಿಷ್ಟನ್ನೂ ರೆಕಾರ್ಡ್ ಮಾಡಿದ ಅಮರ್ - ಅಜಿತ್ , ಒಳ್ಳೆ ಸಸ್ಪೆನ್ಸ್ ಥ್ರಿಲ್ಲರ್ ಸಿನೆಮಾ ಜನರಿಗೆ ತೋರಿಸಲು ಸಜ್ಜಾದರು.