Saturday, January 11, 2020

ಸೀತೆಯ ಸ್ವಗತ

ಲೋಕದ ಕಣ್ಣಿಗೆ ಸೀತಾರಾಮ,
ಜಾನಕಿಗೆಂದೂ ರಾಜಾರಾಮ


ಕನ್ಯಾಸೆರೆ ಬಿಡಿಸಿದ ಕಲ್ಯಾಣರಾಮ
ನಾನೆಣಿಸಿದೆ ಇನ್ನು ಸುಖಕಿಲ್ಲ ಕ್ಷಾಮ
ಆದರೆ,  ಕೈಕೇಯಿ ಅಮ್ಮನ ರಾಮಚಂದ್ರ
ಅಡವಿಯ ಹಾದಿಗೆ ಹಿಡಿದಿದ್ದ ಲಾಂದ್ರ!

ನಾ ಕೇಳಿದ್ದೊಂದೇ ಹೊನ್ನಿನ ಜಿಂಕೆ
ಹೊಕ್ಕೆನು ದುರುಳನ ಮಾಯಾಲಂಕೆ
ಅದಕೆದುರಿಸಿದೆ ಸಾವಿರ ಶಂಕೆ
ಅಯ್ಯೋ ಹೆಣ್ಣೇ ನೀನಿನ್ನು ಕೇಳುವುದು ಬರಿಯ ಕೊಂಕೇ!!

ದಶಮುಖಮರ್ದನ ದಶರಥರಾಮ
ಒಡ್ಡಿದ ಅಗ್ನಿಪರೀಕ್ಷೆಯ ಹೋಮ,
ಎದುರಿಸಿ ಗೆದ್ದರು ಮನಕಿಲ್ಲ ಶಾಂತಿ
ನಡೆ ಸೀತೆ,  ನಿನಗಿದೋ ಕಾದಿದೆ ಹೊಸಬಾಳಿನ ಕ್ರಾಂತಿ!

ಸ್ವಗತ ಕೇಳಿದ್ದು ಸಾಕೇ ನಾರಿ,
ಮಾಡಿಕೊ ನಿನ್ನದೇ ಸ್ವಂತದ ದಾರಿ
ಬೇರೆ ಬೇಡ ನಿನಗೆ ಅನ್ಯ ರೂಪದರ್ಶಿ
ಜಗಕೇ ನೀನಾಗಬಲ್ಲೆ ಮಾರ್ಗದರ್ಶಿ!