Monday, March 9, 2020

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ - ಕನಕದಾಸರು



ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!.... ತಾಯಿ ತಂದೆಯ ಬಿಟ್ಟು ತಪವು ಮಾಡಲು ಬಹುದು ದಾಯಾದಿ ಬಂಧುಗಳ ಬಿಡಲು ಬಹುದು ರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದು ಕಾಯಜಾಪಿತ ನಿನ್ನ ಅಡಿಯ ಬಿಡಲಾಗದು !! ೧ || ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!...... ಒಡಲು ಹಸಿಯಲು ಅನ್ನವಿಲ್ಲದೆ ಇರಬಹುದು ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು! ಮಡದಿ ಮಕ್ಕಳ ಕಡೆಗೆ ತೊಲಗಿಸಿಯೇ ಬಿಡಬಹುದು ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು || ೨ || ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!.... ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು ಮಾನದಲಿ ಮನವ ತಗ್ಗಿಸಲೂಬಹುದು ಪ್ರಾಣನಾಯಕನಾದ ಆದಿಕೇಶವರಾಯ ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು! ||೩|| ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!..........

ರಚನೆ - ಕನಕದಾಸರು